ಧರ್ಮಾಚರಣೆ:

*ನಾನು ನಮ್ಮ ಸಂಸ್ಕೃತಿಯಲ್ಲಿನ ಶೋಡಷ ಸಂಸ್ಕಾರಗಳು ಹಾಗು ಕೆಲವು ವಿಷಯದ ಮೇಲೆ ಬರೆಯುವ ನಿರ್ಧಾರ ಮಾಡಿದ್ದೆ,ಆದರೆ ಈಗ ಅವೆಲ್ಲಕ್ಕೂ ಮೊದಲು ನಮ್ಮ ಧರ್ಮದ ಕೆಲ ಸಾಮಾನ್ಯ ಜ್ಞಾನಗಳ ಬಗ್ಗೆ ಮೊದಲು ಅರಿವು ಮೂಡಿಸಬೇಕು ಅನ್ನುವ ಉದ್ದೇಶದಿಂದ ಈ ವಿಷಯವನ್ನ ನಿಮ್ಮ ಮುಂದಿಡುತ್ತಿದ್ದೇನೆ.ಧರ್ಮಾಚರಣೆ ಅಂದರೆ ನಮ್ಮ ಧರ್ಮದ ಆಚರಣೆ (ಧರ್ಮದಲ್ಲಿರುವ ಆಚಾರ ವಿಚಾರಗಳು). ಈ ಧರ್ಮಾಚರಣೆಯ ಬಗ್ಗೆ ತಿಳಿಯುವ ಮೊದಲು ಧರ್ಮ ಅಂದರೇನು ಅನ್ನುವುದನ್ನ ತಿಳಿದುಕೊಳ್ಳಬೇಕು.

ಧರ್ಮ:  
ಶ್ರೀಯುತ ಸುಧಾಕರ ಶರ್ಮರು ಹೇಳಿದ ಪ್ರಕಾರ "ಯಾವುದು ಎಲ್ಲರನ್ನೂ ಉಳಿಸಿ ಬೆಳೆಸುತ್ತದೆಯೋ ಅದೇ ಧರ್ಮ.'ಯದ್ ಧಾರ್ಯತೆ ತದ್ ಧರ್ಮಂ' ಅಂದರೆ ನಾವು ಉಳಿದು ಬೆಳೆಯುವುದಕ್ಕಾಗಿ ಯಾವ ವಿಚಾರಗಳು,ಯಾವ ಆಚರಣೆಗಳು,ಯಾವ ಸಂಪ್ರದಾಯಗಳು ಉಪಯೋಗಕ್ಕೆ ಬರುತ್ತೋ ಅವೆಲ್ಲವೂ ಧರ್ಮ ಅನ್ನಿಸಿಕೊಳ್ಳುತ್ತೆ.ಎಲ್ಲರಿಗೂ ಉಳಿದು ಬೆಳೆಯುವುದಕ್ಕೆ ಸಹಾಯ ಮಾಡುವ ವಿಚಾರಗಳೇ ಧರ್ಮ."
"ಧರ್ಮೋ ರಕ್ಷತಿ ರಕ್ಷಿತಃ"ಅನ್ನುವಂತೆ ರಕ್ಷಿತ ಧರ್ಮವು ನಮ್ಮನ್ನು ರಕ್ಷಿಸುತ್ತದೆ.ನಾವು ಧರ್ಮದ ಉಳಿವಿಗಾಗಿ ಹೋರಾಡಿದರೆ ಧರ್ಮ ನಮ್ಮನ್ನ ರಕ್ಷಿಸುತ್ತದೆ. ಆದರಿಂದ ನಾವು ಧರ್ಮದ ಉಳಿವಿಗಾಗಿ ಎಷ್ಟು ಹೊರಾಡುತ್ತೆವೋ ಅಷ್ಟು ನಮ್ಮ ರಕ್ಷಣೆ ಮಾಡಿಕೊಂಡಂತೆ. ಈಗಿನ ಕಾಲದಲ್ಲಿ ಮುಸ್ಲಿಂ ಕ್ರಿಶ್ಚಿಯನ್ ಧರ್ಮವು ಮುಂದೆ ಬರಲು ಕಾರಣ ಅವರ ಪ್ರಚಂಡ ಉಪಾಸನೆ. ನೀವು ಸದ್ಯ ಈಡಿ ಸಮಾಜದ ಬಗ್ಗೆ ಯೋಚಿಸಬೇಕೆಂದಿಲ್ಲ ಮೊದಲು ನಿಮ್ಮ ಸ್ವಂತದ ವಿಚರಾಗಳನ್ನ ಬದಲಾಯಿಸಿಕೊಳ್ಳಿ ಆಮೇಲೆ ಸಮಾಜ ತನ್ನಿಂದ ತಾನೇ ಸುಧಾರಣೆಯಾಗುವುದು. ಧರ್ಮದ ಬಗ್ಗೆ ಇಷ್ಟು ಮಾಹಿತಿ ಬೇಕಾದಷ್ಟಿದೆ ಅಂದುಕೊಂಡಿದ್ದೇನೆ.ಇದರ ಬಗ್ಗೆ ಜಾಸ್ತಿ ಮಾತನಾಡಿದರೆ ಆಚರಣೆಯ ಬಗ್ಗೆ ಹೇಳುವವರಾರು..?

ಧರ್ಮಾಚರಣೆ:
ನಾವು ನಮ್ಮ ಧರ್ಮದ ಉಳಿವಿಗಾಗಿ ಏನು ಮಾಡಬೇಕು ಅನ್ನುವ ಮೊದಲು ನಮ್ಮ ಧರ್ಮದವರ ಸದ್ಯದ ಆಚರಣೆಗಳ ಬಗ್ಗೆ ಕೆಲ ಸಂಗತಿಗಳನ್ನ ಹೇಳಲು ಇಚ್ಚಿಸುತ್ತೇನೆ.ನನ್ನ ಅನುಭವಕ್ಕೆ ಬಂದ ಕೆಲ ಅಚ್ಚರಿಯ ವಿಷಯಗಳಿವೆ ಅದನ್ನ ಮೊದಲು ಹೇಳಿದರೆ ನೀವು ಅದರಲ್ಲಿನ ಯಾವ ಗುಂಪಿಗೆ ಬರುತ್ತೀರಿ ಅನ್ನುವುದು ನಿಮಗೆ ತಿಳಿಯುತ್ತೆ ಅದರಿಂದ ನಿಮ್ಮನ್ನ ನೀವು ಬದಲಾಯಿಸಿಕೊಳ್ಳಲು ಸುಲಭವಾಗಬಹುದು.
ನಾನು ಹಲವು ಕಡೆ ಪೂಜೆಗೆ ಹೋದಾಗ ಮತ್ತು ನಮ್ಮ ಸಹಕಾರಿಗಳ ಅನುಭವಕ್ಕೆ ಬಂದ ಕೆಲ ಸಂಗತಿಗಳಿವು. ನಾವು ಮೊದಲು ಹೋದ ತಕ್ಷಣ ಯಜಮಾನರಿಗೆ ಮಡಿ ಉಡಲು ಹೇಳುತ್ತೇವೆ(ಮಡಿ ಉಡಿ ಅಂತ ಹೇಳುವುದಲ್ಲದೆ ಅವರಿಗೆ ಮಡಿ ಉಡಿಸಿದ ಪ್ರಸಂಗಗಳಿವೆ.) ಇಲ್ಲಿಂದ ಶುರುವಾಯಿತು ನೋಡಿ,ಅದಕ್ಕೆ ಅವರ ಪ್ರಶ್ನೆ ಮಡಿಯನ್ನೇ ಉಡಬೇಕೇ? ಪ್ಯಾಂಟು ಶರ್ಟು ಆಗದೆ? ಹೊಸ ಬಟ್ಟೆಗಳು ನಡೆಯದೆ? ಮಡಿ ಮೈಲಿಗೆಯ ವಿಚಾರ ಬಿಡಿ ಇದಕ್ಕೆ ಏನೆನ್ನಬೇಕು ನೀವೇ ಹೇಳಿ.ಇದಾದ ನಂತರ ಅವರಿಗೆ ಕೆಳಗೆ ಕೂಡಲು ಹೇಳಿದರೆ ಅವರ ಪ್ರಶ್ನೆ ಎಷ್ಟು ಹೊತ್ತು ಕೂಡಬೇಕಾಗಬಹುದು?ನನಗೆ ಬಹಳ ಹೊತ್ತು ಕೆಳಗೆ ಕೂಡಲಾಗುವುದಿಲ್ಲ ಅನ್ನೋದು. ಈಗಿನ ಯುಗದಲ್ಲಿ ಉಟಕ್ಕೆ ಮೇಲೆ, ತಿಂಡಿಗೆ ಮೇಲೆ, ಮಲಗೋಕೆ ಮೇಲೆ, ಕೂಡೋದು ಖುರ್ಚಿ ಮೇಲೆ ಇವೆಲ್ಲ ಬಿಡಿ ಬೆಳಿಗ್ಗೆ ಬೆಳಿಗ್ಗೆ ಕೂಡ ಕೆಳಗೆ ಕೂಡೋ ಪರಿಸ್ಥಿತಿಯೂ ಇಲ್ಲ ಅದೂ ಈಗ ಮೇಲೆ. ಸರಿ ಬಿಡಿ ಅಂತೋ ಇಂತೋ ಅವರನ್ನ ಕೆಳಗೆ ಕೂಡಿಸಿದ ಮೇಲೆ ಮೊದಲ ನಮ್ಮ ಪ್ರಶ್ನೆ ಜನಿವಾರ ಇದೆಯೇ?(ಸದ್ಯ ನಮ್ಮ ಧರ್ಮದವರಿಗೆ ಈ ಪ್ರಶ್ನೆ ಕೇಳುವ ಕಾಲ ಬಂದಿರುವುದಂತೂ ನಿಜ) ಅದಕ್ಕೆ ಅವರ ಉತ್ತರ ಕೇಳಿದರೆ ಅಳಬೇಕೋ ನಗಬೇಕೋ ಒಂದೂ ತಿಳಿಯುವುದಿಲ್ಲ,"ಸ್ನಾನ ಮಾಡುವಾಗ ಬಿದ್ದೋಗಿದೆ, ಬನಿಯನ್ ತೆಗೆಯುವಾಗ ಬಿದ್ದೋಗುತ್ತೆ , ಮಂಚಕ್ಕೆ ಸಿಗಿಸಿರುವೆ ಇಗೋ ಹಾಕಿಕೊಂಡು ಬಂದೆ,ಇನ್ನು ಕೆಲವರು ಹೇಳುತ್ತಾರೆ ಕಪಾಟಿನ ಲೊಕರ್ ಅಲ್ಲಿದೆ ತೆಗೆದುಕೊಂಡು ಬರುತ್ತೇನೆ(ಅದೇನು ಚಿನ್ನದ ವಸ್ತುವೇ ಲೊಕರ್ ಅಲ್ಲಿ ಇಡೋಕೆ?) ಅಬ್ಬ ನಮ್ಮ ಜನರಿಗೆ ಜನಿವಾರ ಹಾಕಲು ಏನು ರೋಗ ಅಂತಾ? ತೀರ್ಥ ತೆಗೆದುಕೊಂಡರೆ ಶೀತ ಆರತಿ ತೆಗೆದುಕೊಂಡರೆ ಉಷ್ಣ ಅನ್ನುವ ಎಷ್ಟೋ ಜನರಿದ್ದಾರೆ.ಪೂಜೆಯ ಶುರುವಾತಿಗೆ ಆಚಮನದ ಬಗ್ಗೆ ಹೇಳಿದರೆ ಪೂಜೆ ಮುಗಿದಾಗ ಆಚಮನ ಮಾಡಿ ಅಂದರೆ ಮುಖ ಮುಖ ನೋಡುತ್ತಾರೆ. ಜನರಿಗೆ ತಾವು ಮಾಡುವ ಕೆಲಸದಲ್ಲಿ ಶ್ರದ್ದೆಯಿಲ್ಲದಿರುವುದರಂದ ಶ್ರದ್ದೆ ಹೋಗಲಿ ಲಕ್ಷವೂ ಇಲ್ಲದಿರುವುದರಿಂದ (ಹೋಮ ಶುರುವಾದ ಕೂಡಲೇ ಒಳಹೊಕ್ಕು ಬಾಗಿಲು ಮುಚ್ಚಿ ಕೂಡುತ್ತಾರೆ) ಪುರೋಹಿತರು ಆಡಿದ್ದೆ ಆಟವಾಗಿದೆ.
ದಿನನಿತ್ಯ ಜೋಗಿಂಗ್ ಗೆ, ವಾಕಿಂಗ್ ಗೆ, ಟಿ ವಿ ನೋಡೋಕೆ, ಜಿಮ್ ಗೆ ಹೋಗಲು ಸಮಯ ಬದಿಗಿಡುವ ಜನ ದಿನ ಒಂದು ಅರ್ಧ ಘಂಟೆ ಸಂಧ್ಯಾವಂದನೆಗೆ ದೇವರ ಪೂಜೆಗೆ ತೆಗೆಯದಿರುವುದು ವಿಷಾದದ ಸಂಗತಿ.ಇನ್ನೊಂದು ಬಾರಿ ನಡೆದ ಘಟನೆ ಒಂದು ಕಡೆ ಪೂಜೆಗೆ ಹೋದಾಗ ದೇವರ ಪೂಜೆ ಆಯಿತಾ ಎಂದಾಗ ಆ ಮನುಷ್ಯ ದೇವರನ್ನೆಲ್ಲ ಜರಡಿಯಲ್ಲಿ ಹಾಕಿ ಬೇಸಿನ್ ಕೆಳಗೆ ದೇವರನ್ನೆಲ್ಲ ಹಿಡಿದು ತಂದಿಟ್ಟು ಇಗೋ ಆಯಿತು ಎರಡೇ ನಿಮಿಷ ಅಂದಿದ್ದು ನೋಡಿ ಕೆಲ ಕ್ಷಣ ಸುಮ್ಮನಿದ್ದು ಓ ದೇವರೇ ಏನಪ್ಪಾ ನಿನ್ನ ಲೀಲೆ ಅನ್ನುವುದನ್ನ ಬಿಟ್ಟರೆ ಬೇರೇನೂ ತೋಚಲಿಲ್ಲ.ಹಿರಿಯರನ್ನ ನೋಡಿ ಕಿರಿಯರು ಅನುಕರಿಸುತ್ತಾರೆ ಆದರೆ ಮನೆಯ ಹಿರಿಯರಿಗೇ ಇವೆಲ್ಲ ಬೇಡವಾಗಿದ್ದರೆ ಮಕ್ಕಳಿಗೆ ಸಂಸ್ಕಾರಗಳ ಹೇಗೆ ತಿಳಿಯಬೇಕು?
ಕ್ರೈಸ್ತರಿಗೆ ಏಸುವಿನ ಮುಂದೆ ಕಣ್ಮುಚ್ಚಿ ನಿಂತು ಧ್ಯಾನ ಮಾಡಲು ನಾಚಿಕೆಯಿಲ್ಲ,ಮುಸ್ಲೀಮರಿಗೆ ತಲೆ ಮೇಲೆ ಟೋಪಿ ಹಾಕಿ ನಮಾಜು ಮಾಡಲು ನಾಚಿಕೆ ಇಲ್ಲದಿರುವಾಗ ನಮ್ಮ ಹಿಂದುಗಳಿಗೆ ದೇವರಿಗೆ ನಮಸ್ಕಾರ ಮಾಡಲು ಏಕೆ ನಾಚಿಕೆ ಅನ್ನುವುದೇ ತಿಳಿಯುವುದಿಲ್ಲ.ಎಲ್ಲಿಗೋ ಹೊರಟಾಗ ರಸ್ತೆಯಲ್ಲಿ ದೇವಸ್ಥಾನ ಕಾಣುತ್ತೆ,ಅಲ್ಲಿಗೆ ಹೋಗುವುದು ಬಿಡಿ ರಸ್ತೆಯಲ್ಲಿ ನಿಂತು ದೇವರಿಗೆ ನಮಸ್ಕಾರವನ್ನ ಮಾಡುವುದನ್ನ ನೋಡಿದರೆ ಬಹುಶಃ ಅವ್ರು ನಮಸ್ಕಾರ ಮಾಡಿದ್ದು ದೇವರ ಗಮನಕ್ಕೋ ಬಂದಿರಲಿಕ್ಕಿರಲಿಲ್ಲ ಅನ್ನಿಸುತ್ತೆ.ಆ ಕಡೆ ಈ ಕಡೆ ನೋಡಿ ನಮ್ಮ ಬದಿಗೆ ಯಾರೂ ನೋಡುತ್ತಿಲ್ಲ ಅನ್ನುವುದನ್ನ  ಖಚಿತಪಡಿಸಿಕೊಂಡು ನಮಸ್ಕಾರ ಮಾಡುವವರಿಗೆ ಏನೆನ್ನಬೇಕು? ದೇವರಿಗೆ ಕೈ ಜೋಡಿಸಲು ನಮಗೆ ಯಾರ ಭಯವೇಕೆ? ಹೀಗೆ ಎಷ್ಟೋ ವಿಷಯಗಳಿವೆ ಇವೆಲ್ಲ ನಮ್ಮ ಅನುಭವಕ್ಕೆ ಬಂದಂಥವ ವಿಷಯಗಳು. ಇದೆ ರೀತಿ ಎಷ್ಟೋ ಜನರ ಮನೆಯಲ್ಲಿ ಕೆಲಸ ಮಾಡುವಾಗ ಹೆದರಿಕೊಂಡು ಕೆಲಸ ಮಾಡುವ ಸನ್ನಿವೇಶಗಳು ಕೂಡ ಎದುರಾಗಿವೆ.ಅವರು ಎಲ್ಲಿ ತಪ್ಪು ಹುಡುಕುತ್ತಾರೋ ಅನ್ನುವ ಭಯ,ಅಂದರೆ ಅವರಿಗೆ ಧರ್ಮದ ಮೇಲಿರುವ ಶ್ರದ್ಧೆ ಮತ್ತು ಧರ್ಮದ ಬಗ್ಗೆ ತಿಳಿದುಕೊಂಡಿರುವ ವಿಷಯಗಳು. ನನಗೆ ಕೆಲವು ಜನರ ಬಗ್ಗೆ ಹೆಮ್ಮೆಯಿದೆ ಯಾಕೆಂದರೆ ಒಬ್ಬ ಪುರೋಹಿತನಿಗಿಂತ ಹೆಚ್ಚಿಗೆ ತಿಳಿದಿಕೊಂಡಿರುವುದಕ್ಕೆ. ಹಲವು ಬಾರಿ ಜನರ ಪ್ರಶ್ನೆಗೆ ದಂಗಾಗಿದ್ದೋ ಇದೆ. ಸದ್ಯದ ಪರಿಸ್ಥಿತಿ ನೋಡಿದರೆ ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವವರ ಸಂಖ್ಯೆ ನನಗನ್ನಿಸಿದ ಮಟ್ಟಿಗೆ ಐದರಿಂದ ಹತ್ತು ಪ್ರತಿಶತ ಮಾತ್ರ.ಹಾಗಾಗಿ ನಮ್ಮ ಧರ್ಮದ ಬಗ್ಗೆ ಸದ್ಭಾವನೆ ಮೂಡಬೇಕಾಗಿದೆ.

ಸ್ವಲ್ಪ ನಮ್ಮ ಕನ್ಯಾಮಣಿಯ ಬಗ್ಗೆ ತಿಳಿಯೋಣ.. ಸದ್ಯದ ಕನ್ಯಾಮಣಿಗಳನ್ನ ನೋಡಿದರೆ ಅವರು ಹುಡುಗಿಯರೋ ಅಥವಾ ಹುಡುಗರೋ ಅನ್ನೋದು ತಕ್ಷಣ ತಿಳಿಯೋದೇ ಇಲ್ಲ. ಪ್ಯಾಂಟು ಶರ್ಟು, ಕಟ್ ಮಾಡಿದ ಕೂದಲು,ಕೈಯ್ಯಲ್ಲಿ ಬಳೆಯಿಲ್ಲ, ಕಿವಿಯಲ್ಲಿ ಒಲೆಯಿಲ್ಲ ಕಾಲಲ್ಲಿ ಗೆಜ್ಜೆಯಿಲ್ಲ (ಇದ್ದರೂ ಅದು ಫ್ಯಾಶನ್ ಬಿಟ್ಟರೆ ಮತ್ತೇನೂ ಅಲ್ಲ) ಹಣೆಯಲ್ಲಿ ಕುಂಕುಮವಂತೂ ಇಲ್ಲವೇ ಇಲ್ಲ, ಹೂವು ಮುಡಿಯುವುದು ಗೊತ್ತೇ ಇಲ್ಲ. ಇದಕ್ಕೆ ಕಾರಣ ಮನೆಯಲ್ಲಿ ಇರದ ಸಂಸ್ಕಾರಗಳು. ಮನೆಯಲ್ಲಿ ತಾಯಿ ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಮುಂತಾದ ಹೆಂಗಸರು ಸರಿಯಾಗಿ ನಡೆದುಕೊಂಡರೆ ಎಲ್ಲ ಸರಿಯಾಗಿರುತ್ತೆ. ಈಗ ಸೀರೆ ಹೋಗಿ ಚುಡಿದಾರ,ಚುಡಿದಾರ ಹೋಗಿ ನೈಟಿ ಗೌನುಗಳು ಬಂದಿವೆ. ಮನೆಯಲ್ಲಿ ಯಾರಾದರೂ ಬಂದಾಗ ಹೇಗಿರಬೇಕು ಅನ್ನುವುದು ತಿಳಿಯದಾಗಿದೆ. ಸೀರೆ ಉಡೋಕೆ ತೊಂದರೆ ನೈಟಿ ಹಾಕಿಕೊಂಡರೆ ಫ್ರೀ ಆಗಿರುತ್ತೆ ಅಂತಾರೆ ನಿಮ್ಮ ತಲೆ ಧರ್ಮ ಬಿಟ್ಟು ಹೋಗಿ ಏನು ಸಾಧಿಸಬೇಕು ಅಂದುಕೊಂಡಿದ್ದೀರಿ? ಅಂದರೆ ಉತ್ತರವಿಲ್ಲ. ಮನೆಯಲ್ಲಿ ಹೆಣ್ಣು ಮಕ್ಕಳು ಅಡಿಗೆ ಮಾಡುವುದು ಹೋಗಲಿ ಒಂದು ದಿನವೂ ಕಸ ಗುಡಿಸಿ ನೆಲ ಒರೆಸಿದ್ದಂತೂ ಬಹುತೇಕ ಇರಲಿಕ್ಕಿಲ್ಲ.ಮನೆಗೆ ಮಗಳು ಎಷು ಹೊತ್ತಿಗೆ ಬರುತ್ತಾಳೆ?ಹೊರಗಡೆ ಏನೇನುಮಾಡುತ್ತಾಳೆ ಅನ್ನುವುದರ ಪರಿವೆ ಕೂಡ ಮನೆಯವರಿಗೆ ಇರುವುದಿಲ್ಲ.ಒಮ್ಮೆ ಮದುವೆಯಲ್ಲಿ ಮದುಮಗಳು ಚುಡಿದಾರ ಹಾಕಿಕೊಂಡು ಬಂದಿದ್ದನ್ನ ಕೇಳಿದರೆ ಎನೆನ್ನುತ್ತೀರೋ? ನೀವು ಸಮಾಜದ ಮುಂದೆ ಬರುವಾಗ ಪೂಜೆ ಪುನಸ್ಕಾರ ಮಾಡುವಾಗಲಾದರೂ ಸ್ವಲ್ಪ ಮಟ್ಟಿಗೆ ನಮ್ಮ ಧರ್ಮದ ವಿಚಾರ ಮಾಡಿದರೆ ತಪ್ಪೇನು?
ವಟ ಪೂರ್ಣಿಮೆಯ ಪೂಜೆ ಇದೆ ಅಂದಾದರೂ ಸೀರೆ ಉಟ್ಟು ಹೂ ಮುಡಿದು ಪೂಜೆ ಮಾಡಿದರೆ ನಿಮ್ಮ ಗಂಟೇನು ಹೋಗುತ್ತೆ? ಪೂಜೆ ಮಾಡುವುದಾದರೂ ಏತಕ್ಕೆ ಅನ್ನುವ ಎಷ್ಟೋ ಮಹಿಳೆಯರಿದ್ದಾರೆ. ನಿಮ್ಮ ಮತ್ತು ವಟ ವೃಕ್ಷದ ಮೈತ್ರಿ ಆಗಲಿ ಅಂತಾದರೂ ಪೂಜೆ ಮಾಡಿ. ಗಂಡನ್ನ ಬದಿಗಿಡಿ. ವಟ ವೃಕ್ಷದಿಂದ ಉತ್ಪತ್ತಿಯಾಗುವ ವಾಯುವೆನಿದೆ ಅದು ನಿಮ್ಮ ಆರೋಗ್ಯಕ್ಕೆ ಉತ್ತಮ. ವೃಕ್ಷದಿಂದ ಅದು ಬಿಟ್ಟು ಕೊಂಬೆ ಮುರಿದು ಅದನ್ನ ಮನೆಯಲ್ಲಿ ತಂದು ಮಾಡುವ ಪೂಜೆಯಿಂದ ಏನೂ ಪ್ರಯೋಜನವಿಲ್ಲ.

ಇನ್ನೊಂದು ವಿಚಾರ ನೀವೇನಾದರೂ ಚರ್ಚಲ್ಲಿ ಹೋಗಿ ನೋಡಿ ಪೋಪ್ ತಮ್ಮ ಪಾರಂಪಾರಿಕ ಬಟ್ಟೆಯಲ್ಲೇ ಬರುತ್ತಾರೆ.ಎಲ್ಲರೂ ಒಮ್ಮೆಲೇ ಕಣ್ಮುಚ್ಚಿಕೊಂಡು "ಓ ಫಾದರ್ " ಅಂತ ಏಸುವಿನ ಸ್ಮರಣೆ ಮಾಡುತ್ತಾರೆ,ಅದೇ ರೀತಿ ಮಸೀದಿಯಲ್ಲಿ ಎಲ್ಲ ಮುಸ್ಲೀಮರೂ ಒಮ್ಮೆಲೇ ನಮಾಜು ಮಾಡುವುದನ್ನ ನಾವು ನೋಡಿದ್ದೇವೆ.ಆದರೆ ನಮ್ಮ ಹಿಂದೂಗಳು ಹೀಗೆ ಸಾಮೂಹಿಕವಾಗಿ ಭಜನೆ ಮಾಡಿರುವುದನ್ನ ನಾನಂತೂ ನೋಡಿಲ್ಲ.ದೇವರ ನಾಮಸ್ಮರಣೆಯ ಹೆಸರೆತ್ತಿದರೆ ಒಳ್ಳೆ ಹರಳೆಣ್ಣೆ ಕುಡಿದವರ ಥರ ಮಾಡ್ತಾರೆ.ಕೈ ಮುಗಿದರೆ ಎಲುಬು ಮುರಿದು ಹೋಗುತ್ತೋ ಅನ್ನುವಂತಿರುತ್ತೆ ಅವರ ಕೈ ಮುಗಿಯುವಿಕೆ.

ದೇವರ ನಾಮಸ್ಮರಣೆ ಅನ್ನುವುದು ಕೇವಲ ಆಧ್ಯಾತ್ಮಿಕ ಆನಂದವನ್ನ ನೀಡುವುದಲ್ಲದೆ ಮನೆಯಲ್ಲಿನ ಎಷ್ಟೋ ಜಗಳಗಳನ್ನ ನಿರ್ಮೂಲನೆ ಮಾಡುವ ಶಕ್ತಿಯನ್ನ ಹೊಂದಿದೆ.ಮನೆಯಲ್ಲಿ ಕಸ ಗುಡಿಸುವಾಗ,ಸ್ನಾನ ಮಾಡುವಾಗ,ಅಡುಗೆ ಮಾಡುವಾಗಲಾದರೂ ದೇವರ ಸ್ತೋತ್ರಗಳನ್ನ ಹೇಳಬಹುದಲ್ಲ? ಬಾಥರೂಂ ಸಿಂಗರ್ ಅಂತ ತಮ್ಮನ್ನು ತಾವು ಹೊಗಳಿಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ,ಅಂಥವರು ಸ್ನಾನ ಮಾಡುವಾಗ ದೇವರ ಸ್ಮರಣೆ ಮಾಡುವುದರಲ್ಲಿ ತಪ್ಪೇನಿಲ್ಲ. ಇನ್ನು ಕೆಲವರು ಕೇಳುತ್ತಾರೆ "ಮನಸ್ಸಿನಲ್ಲಿ ನಾಮಸ್ಮರಣೆ ಮಾಡಿದರೆ ಆಗಬಹುದೋ?" ಮನಸ್ಸಿನಲ್ಲಿ ಬರೆದುಕೊಳ್ಳಲು ಸಾಧ್ಯವೇ ? ಇಲ್ಲ ತಾನೇ ಬರೆಯೋಕೆ ಕಾಗದ ಪೆನ್ನು ಅವಶ್ಯಕ ಅಲ್ಲವೇ ಅದೇ ರೀತಿ ದೊಡ್ಡ ಸ್ವರದಲ್ಲಿ ನಾಮಸ್ಮರಣೆ ಮಾಡುವುದರಿಂದ  ನಿಮ್ಮ ಮನಸ್ಸಿಗಲ್ಲದೆ ಸುತ್ತಮುತ್ತಲಿನ ಪರಿಸರಕ್ಕೂ ಶುಭಾದಾಯಕವಾಗಿರುತ್ತೆ. ಮನಸ್ಸಿನಲ್ಲಿರುವುದು ಕಾರ್ಯರೂಪಕ್ಕೆ ಬರದಿದ್ದರೆ ಮನಸ್ಸಿನಲ್ಲಿರುವುದಕ್ಕೆ ಯಾವುದೇ ಅರ್ಥವಿಲ್ಲ.
ನಿಮ್ಮಲ್ಲಿ ಕೆಲವರು ಭಜನೆ ನಾಮಸ್ಮರಣೆ ಮಾಡುತ್ತಿರಬಹುದು ಆದರೆ ಮಾಡದಿರುವವರಿಗೆ ನೀವು ಮಾದರಿಯಾಗಬೇಕು. ಮೊದಲೇ ಹೇಳಿದಂತೆ ಸಂಸ್ಕಾರಗಳು ಅನ್ನೋದು ಹಿರಿಯರಿಂದ ಕಿರಿಯರಿಗೆ ಬರುವಂತಹದು ಆದ್ದರಿಂದ ಮನೆಯ ಹಿರಿಯರು ಮಕ್ಕಳಿಗೆ ಸಂಸ್ಕಾರಗಳನ್ನ ಹೇಳಿಕೊಡಬೇಕಾಗಿದೆ.ಅಪ್ಪ ಮನೆಯಲ್ಲಿ ಸಂಧ್ಯಾವಂದನೆ ಪೂಜೆ ಮಾಡಿದರೆ ಮಗ ಕೂಡ ಅದರ ಅನುಕರಣೆ ಮಾಡುತ್ತಾನೆ. ಅಮ್ಮ ಬೆಳಿಗ್ಗೆ ಎದ್ದು ಮನೆಯುದುರು ರಂಗೋಲಿ ಹಾಕಿದರೆ ಮಗಳಿಗೂ ಕೂಡ ಅದು ತನ್ನಿಂತಾನೆ ರೂಢಿಯಾಗುತ್ತೆ. ಮಕ್ಕಳು ಅದನ್ನ ಅನುಕರಿಸದಿದ್ದರೆ ತಿದ್ದುವ ಕೆಲಸ ನಿಮ್ಮದು,ಅದನ್ನ ಬಿಟ್ಟು "ಬೇಡ ಮಗ ನಾನು ಪೂಜೆ ಮಾಡ್ತೀನಿ ನೀನು ಮಲಗು" ಅನ್ನೋದನ್ನ ಬಿಟ್ಟು ನಿಮ್ಮ ಜೊತೆ ಕೂಡಿಸಿಕೊಂಡು ಪೂಜೆ ಪುನಸ್ಕಾರಗಳನ್ನ ಮಾಡಿದರೆ ಅವರಿಗೂ ಅದರ ಬಗ್ಗೆ ಕುತೂಹಲ ಮೂಡುತ್ತದೆ. ಹೇಗೆ ನೀವು ನಿಮ್ಮ ಶರೀರಕ್ಕಾಗಿ ವ್ಯಾಯಾಮ ಮಾಡುತ್ತಿರೋ ಹಾಗೆಯೆ ಸಂಧ್ಯಾವಂದನೆ ಮತ್ತು ಗಾಯತ್ರಿ ಜಪ ಕೂಡ ನಿಮ್ಮ ಸ್ವಂತದ ಉದ್ಧರಕ್ಕಾಗಿಯೇ ಇರುವಂತಹುದು.ಅದನ್ನ ಬೇರೆಯವರ ಉಪಕಾರಕ್ಕಾಗಿ ಮಾಡದೆ ನಿಮ್ಮ ಸಲುವಾಗಿ ಮಾಡಿ. ಪ್ರತಿಯೊಬ್ಬರೂ ತಮ್ಮ ಧರ್ಮದ ಉಳಿವಿಗಾಗಿ ಹೋರಾಡುತ್ತಿರುವಾಗ ನಮ್ಮ ಹಿಂದೂ ಧರ್ಮದವರು ಈ ಧರ್ಮದಲ್ಲಿ ಹುಟ್ಟಿರುವುದಕ್ಕೆ ನಾಚಿಕೆ ಪಟ್ಟುಕೊಳ್ಳುವುದೇಕೆ? ನಮ್ಮ ಧರ್ಮದ ಆಚಾರ ವಿಚಾರಗಳನ್ನ ಮುಚ್ಚಿಡುವುದೇಕೆ?ಇದರಿಂದ ನೀವು ಈ ಧರ್ಮದಲ್ಲಿ ಹುಟ್ಟಿದ್ದು ಬರೀ ಹಿಂದೂ ಧರ್ಮವಲ್ಲದೆ ಮಾನವ ಧರ್ಮದಲ್ಲಿ ಹುಟ್ಟಿದ್ದೇ ವ್ಯರ್ಥವಾದಂತೆ.ಹಾಗಾಗಿ ಇಷ್ಟು ದಿನ ನಡೆದಿದ್ದರ ಬಗ್ಗೆ ಚಿಂತಿಸದೆ ಮುಂದೆ ನಡೆಯಬೇಕಾದ ವಿಚಾರಗಳ ಬಗ್ಗೆ ಚಿಂತಿಸೋಣ.




 ನಾನು ಇಷ್ಟೆಲ್ಲಾ ಬರೆದಿದ್ದು ನಮ್ಮ ಧರ್ಮದಲ್ಲಿನ ಕೀಳು ಭಾವನೆಯನ್ನ ತೋರಿಸಲು ಅಲ್ಲ. ಇದು ಸಧ್ಯದ ಪರಿಸ್ಥಿತಿ ಆಗಿದೆ.ಇದರ ಬಗ್ಗೆ ಯಾವುದೋ ಜನರ ಬಾಯಲ್ಲಿ ಕೇಳಿ ಸುಧಾರಿಸಿಕೊಳ್ಳುವುದಕ್ಕಿಂತ ನಮ್ಮ ನಮ್ಮಲ್ಲಿಯೇ ಈ ವಿಷಯ ಇತ್ಯರ್ಥವಾದರೆ ಒಳಿತಲ್ಲವೇ?
 
ಆದ್ದರಿಂದ ಎಲ್ಲ ಹಿಂದುಗಳೇ ಎಚ್ಚೆತ್ತುಕೊಳ್ಳಿ ಇಂದೇ ಪ್ರತಿಜ್ಞೆ ಮಾಡಿ
" ನಾನು ಬ್ರಾಹ್ಮಣ ಅನ್ನುವುದಕ್ಕೆ ನನಗೆ ಹೆಮ್ಮೆ ಇದೆ"
"ನಾನು ಹುಟ್ಟಿರುವುದು ಹಿಂದೂ ಧರ್ಮದಲ್ಲಿ ಅಂತ ಹೇಳಿಕೊಳ್ಳುವುದಕ್ಕೆ ನನಗೆ ಗರ್ವವಿದೆ."
"ಇಷ್ಟೇ ಅಲ್ಲದೆ ದಿನವೂ ಸಂಧ್ಯಾವಂದನೆ ಮತ್ತು ದೇವರ ನಾಮಸ್ಮರಣೆಗಾಗಿ ಕೆಲಹೊತ್ತನ್ನ ಮೀಸಲಾಗಿಡುವೆ.ನಮ್ಮ ಧರ್ಮದ ಆಚಾರ ವಿಚಾರಗಳನ್ನ ನಮ್ಮ ಮಕ್ಕಳಿಗೆ ನಮ್ಮ ಸಮಾಜಕ್ಕೆ ಸಾರುವೆ."
ಈ ಪ್ರತಿಜ್ಞೆಯನ್ನ ಮಾಡಿದಲ್ಲಿ ಮೊದಲು ನಾವು,ನಮ್ಮ ಕುಟುಂಬ,ನಮ್ಮ ಸಮಾಜ ನಂತರ ನಮ್ಮ ಈ ಧರ್ಮ ಹೇಗೆ ತಲೆ ಎತ್ತಿ ನಿಲ್ಲುವುದು ಅನ್ನುವುದನ್ನ ನೀವೇ ನೋಡಿ. ಆಗ ನಾವು ಹೆಮ್ಮೆಯಿಂದ ಹೇಳಬಹುದು

 " ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ"


1 comment:

  1. ತುಂಬಾ ಒಳ್ಳೆಯ ಲೇಖನ.. ಪ್ರತಿಯೊಬ್ಬ ಬ್ರಾಹ್ಮಣ ಯುವಕನು ಓದಬೇಕಾದ ಲೇಖನ..
    ಧರ್ಮಾಚರಣೆಯ ಮಹತ್ವವನ್ನು ಚೆನ್ನಾಗಿ ವಿವರಿಸಿದ್ದೀರಿ..

    ReplyDelete