ಮಾತೆಯ ಮಡಿಲಲ್ಲಿ:

ಆಕೆ ಕರುಣಾಮಯಿ, ವಾತ್ಸಲ್ಯರೂಪ. ದೈವತ್ವಕ್ಕೆ ಮತ್ತೋಂದು ಹೆಸರೇ ಆಕೆ ಅಂದರೆ ತಪ್ಪಾಗಲಾರದು. ಆಕೆಗೆ ಬದುಕುವ ಆಸೆಯಿದ್ದದ್ದು ಅವಳ ಪುಟ್ಟ ಮಗನ ನಗುವಲ್ಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರಲಾರ ಅಂದುಕೊಂಡು ಮಗನ ನಗುವಲ್ಲೇ ನನ್ನ ಜೀವನವೆನ್ನುತ್ತ ಬಾಳತೊಡಗಿದಳು. ಮನೆ ಮನೆಯಲ್ಲಿ ಪಾತ್ರೆ ಬಟ್ಟೆ ತೊಳೆದಾದರೂ ನನ್ನ ಮಗನನ್ನು ಸಾಕುತ್ತೇನೆ ಅನ್ನುವ ಛಲ ಅವಳಲ್ಲಿ. ಒಬ್ಬಳಾದರೇನು ಅವಳಿಗಾರ ಭಯವಿರಲಿಲ್ಲ, ಅದೆಷ್ಟೋ ಜನರೊಂದಿಗೆ ದೇಹ ಹಂಚಿಕೊಂಡವಳು ಅವಳು. ಎಲ್ಲವನ್ನೂ ಕಳೆದುಕೊಂಡವಳು, ಕಳೆದುಕೊಳ್ಳಲು ಇನ್ನೇನೂ ಉಳಿದಿರಲಿಲ್ಲ ಅವಳಲ್ಲಿ. ಇದೇ ಊರಲ್ಲಿದ್ದರೆ ಮಗನಿಗೆ ಎಲ್ಲಿ ತೋಂದರೆಯಾಗುತ್ತದೋ, ಮಗ ನನ್ನ ಬಗ್ಗೆ ಏನು ಕೇಳುತ್ತಾನೋ ಅನ್ನುವ ಭಯದಿಂದ ಬೆಂಗಳೂರು ಬಿಟ್ಟು ಮೈಸೂರಿಗೆ ಬಂದಳು. ಕಷ್ಟಪಟ್ಟು ಮಗನನ್ನು ಬೆಳೆಸಿದಳು. ತನ್ನೆಲ್ಲ ಇತಿಹಾಸವನ್ನು ಮರೆತು ಮಗನ ಭವಿಷ್ಯ ರೂಪಿಸಿದಳು. ಇಂದು ಮಗ ಬೆಳೆದು ದೊದ್ದವನಾಗಿದ್ದಾನೆ, ಕಲಿತು ನೌಕರಿ ಮಾಡತೊಡಗಿದ್ದಾನೆ. ಇನ್ನೆನು ಹೊಸ ಮನೆಯ ಖರೀದಿ ವಿಚಾರ ನಡೆಸಿದ್ದಾನೆ. ಇದೆಲ್ಲ ಕೇವಲ ಅವಳಿಂದ, ಅವಳ ತ್ಯಾಗದಿಂದ. ಎಲ್ಲಿ ಮಗ ನನ್ನ ಅಪ್ಪ ಯಾರು? ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅಂತ ಕೇಳುತ್ತಾನೋ ಅನ್ನುವ ಭಯ ದಿನವೂ ಅವಳಲ್ಲಿ ಕಾಡಿದ್ದುಂಟು. ತನ್ನೆಲ್ಲ ನೋವ ಮರೆತದ್ದು ಮಗನ ಖುಶಿಯಲ್ಲಿ. ಎಲ್ಲ ಸುಖಮಯವಾಗಿದೆ ಈಗ. ಇನ್ನೆನು ಮಗನ ಮದುವೆಯಾದರೆ ನನ್ನ ಕರ್ತವ್ಯ ಮುಗಿಯಿತು ಅನ್ನುವುದಷ್ಟೆ ಆಕೆಯ ಮನದಲ್ಲಿದ್ದದ್ದು.

ಅಂತೂ ಮಗನ ಮದುವೆಯೂ ನಿಶ್ಚಯವಾದಂತೆ, ಹುಡುಗಿಯನ್ನು ಅವನೇ ನೋಡಿಕೊಂಡಿದ್ದ. ಅದೊಂದು ಚಿಂತೆಯ ವಿಷಯವೇ ಆಗಿತ್ತು, ತಾನು ಎಲ್ಲಿ ಅಂತ ಹುಡುಗಿಯನ್ನು ಹುಡುಕಬೇಕಾಗಿತ್ತು, ಆಗಿದ್ದೆಲ್ಲ ಒಳ್ಳೆಯದಕ್ಕೇ ಅನ್ನುವ ಭಾವ ಅವಳ ಮನದಲ್ಲಿ. ನಿಶ್ಚಿತಾರ್ಥದ ದಿನವೂ ನಿಗದಿಯಾಯಿತು. ಮಗ ಕೊಡಿಸಿದ್ದ ಜರಿ ಸೀರೆಯಲ್ಲಿ ಆಕೆ ಮಹಾಲಕ್ಷ್ಮಿಯ ಸ್ವರೂಪ. ಮನೆಯೆಲ್ಲ ತೋರಣ, ಮಾಲೆಗಳಿಂದ ಕಂಗೊಳಿಸುತ್ತಿತ್ತು. ಆಕೆಯ ಆನಂದಕ್ಕೆ ಮಿತಿಯೇ ಇರಲಿಲ್ಲ. ಹುಡುಗಿಯ ಮನೆಯವರೆಲ್ಲ ಆಗಮಿಸಿದ್ದರು. ಅತಿಥಿ ಸತ್ಕಾರಗಳನ್ನೆಲ್ಲ ತನಗೆ ತಿಳಿದಂತೆ ಮಾಡಿದಳಾಕೆ. ಹುಡುಗಿಯ ತಂದೆ ಇವಳನ್ನ ಅನುಮಾನದಿಂದಲೇ ನೋಡತೊಡಗಿದ್ದರು. ಕೇಲವೇ ಕ್ಷಣದಲ್ಲಿ ಎಲ್ಲವೂ ಮುಗಿದೇ ಹೋಯಿತು. ಈ ಮದುವೆ ಸಾಧ್ಯವೇ ಇಲ್ಲವೆಂಬಂತೆ ಹುಡುಗಿಯ ಕಡೆಯವರು ನಡೆದಿದ್ದರು. ಏನಾಯಿತು? ಯಾಕೆ ಮದುವೆ ಬೇಡವೆಂದರು ಆಕೆಗೆ ಏನೂ ತಿಳಿಯದು. ಮಗನ ಯಾತನೆ ಆಕೆಯ ಹೃದಯ ಹಿಂಡಿತ್ತು. ಏನಾಯಿತೆಂದು ವಿಚಾರಿಸುವಂತೆ ಮಗನಲ್ಲಿ ಕೇಳಿದಳು. ಸರಿ ಎಂದು ಹೋದವನು ಸ್ವಲ್ಪ ಸಮಯದಲ್ಲಿ ಬಂದಿದ್ದ. ಮಗನ ನಿರೀಕ್ಷೆಯಲ್ಲಿದ್ದ ಆಕೆ ಆತ ಬರುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಗೈದಳು. ಅದಕ್ಕೆಲ್ಲ ಆತನ ಉತ್ತರ ನೀನು ಸೂಳೆಯಾ? ಆಕೆ ದಿಗ್ಭ್ರಾಂತಳಾದಳು. ಇಷ್ಟು ವರ್ಷ ತನ್ನ ಒಡಲಲ್ಲಿ ಉಳಿದಿದ್ದ ಕಟು ಸತ್ಯ ಈತನಿಗೆ ಹೇಗೆ ಗೊತ್ತಾಯಿತು ಏನೋಂದೂ ಆಕೆಗೆ ತಿಳಿಯದಾಯಿತು. ಇಷ್ಟು ವರ್ಷದ ಪಟ್ಟ ಕಷ್ಟವೆಲ್ಲ ನೀರಿನಲ್ಲಿ ಮಾಡಿದ ಹೋಮದಂತೆ ಅನಿಸತೊಡಗಿತು ಆಕೆಗೆ. ನೀನೊಬ್ಬಳು ವ್ಯಭಿಚಾರಿ, ಇಷ್ಟು ದಿನ ಇದನ್ನೆಲ್ಲ ನೀನು ನನ್ನಿಂದ ಮುಚ್ಚಿಟ್ಟೆ... ಯಾರಿಗೋ ಹುಟ್ಟಿದವ ನಾನು, ನನಗೇಕೆ ಅವರು ಹೆಣ್ಣು ಕೋಡುತ್ತಾರೆ. ಯಾಕೆ ನನ್ನನ್ನು ಹೆತ್ತೆ ನೀನು, ಹುಟ್ಟುವ ಮೊದಲೇ ಹಿಸುಕಿಬಿಡಬೇಕಾಗಿತ್ತು. ಆಗ ಇದನ್ನೆಲ್ಲ ನೋಡುವ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ, ನಿನ್ನ ಮಗನೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತಿದೆ ನನಗೆ. ಸೂಳೆಯ ಮಗ ಅಂತ ಸಮಾಜಕ್ಕೆ ತಿಳಿದರೆ ಸಮಾಜದಲ್ಲಿ ನನ್ನ ಮಾನ ಹರಾಜಾಗುವದಿಲ್ಲವೇ? ನಿನ್ನ ಮುಖ ನೋಡುವುದಕ್ಕೂ ಅಸಹ್ಯವಾಗುತ್ತಿದೆ ನನಗೆ. ಮಗನ ಈ ಮಾತುಗಳು ಹರಿತವಾದ ಚೂರಿಯಿಂದ ಎದೆಗೆ ಚುಚ್ಚಿದಂತೆ ಅನಿಸತೊಡಗಿತ್ತು ಆಕೆಗೆ. ವರ್ಷಾನುವರ್ಷಗಳ ಕಷ್ಟ ಕ್ಷಣದಲ್ಲೇ ನುಚ್ಚುನೂರಾಗಿತ್ತು. ಕಣ್ಣು ಒದ್ದೆಯಾಗದಂತೆ ಇಷ್ಟು ದಿನ ಪ್ರೀತಿಯಿಂದ ನೋಡಿಕೊಂಡ ಮಗ ಇಂದು ನನ್ನಿಂದ ಕಣ್ಣೀರಿಡುತ್ತಿದ್ದಾನೆ ಅಂದರೆ ನಾನು ಬದುಕಿದ್ದು ಏನು ಪ್ರಯೋಜನವೆನಿಸತೊಡಗಿತು ಆಕೆಗೆ.

ರಾತ್ರಿ ಕಳೆದಿತ್ತು ಮಗ ಕೋಣೆಯಿಂದ ಹೊರಬಂದ. ರಾತ್ರಿಯೆಲ್ಲ ನಿದ್ದೆಯಿಲ್ಲವೆಂದು ಆತನ ಕಣ್ಣು ಹೇಳುತ್ತಿತ್ತು. ಅಮ್ಮನ ಬಗ್ಗೆ ಹೀಗೆಲ್ಲ ಮಾತನಾಡಬಾರದಿತ್ತು, ಅವಳು ಯಾಕೆ ಹೀಗೆ ಮಾಡಿದಳು ಅಂತ ತಿಳಿದುಕೊಳ್ಳಬೇಕಿತ್ತು. ಇದೇ ಚಿಂತೆಯಲ್ಲಿ ಆತ ರಾತ್ರಿಯೆಲ್ಲ ನಿದ್ರಿಸಿರಲಿಲ್ಲ, ಆಕೆಯ ಕ್ಷಮೆ ಕೇಳಬೇಕೆಂದು ಅಮ್ಮನನ್ನು ಕೂಗತೊಡಗಿದ್ದ. ಆಕೆ ಎಲ್ಲೂ ಕಾಣಿಸಲಿಲ್ಲ, ಮನೆಯ ಒಳ ಹೊರಗೆಲ್ಲ ಹುಡುಕಾಡಿದ. ಆಕೆ ಎಲ್ಲೂ ಸಿಗಲಿಲ್ಲ, ಸಿಕ್ಕಿದ್ದು ಆಕೆ ಬರೆದಿಟ್ಟ ಪತ್ರ ಮಾತ್ರ.
ಮಗು ನಾನು ಸೂಳೆಯೇ.. ಆದರೆ ಯಾರೂ ನಾನೋಬ್ಬ ಸೂಳೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ, ಅದೇ ನಾನು ಮಾಡಿದ ತಪ್ಪು. ನನ್ನನ್ನು ಕ್ಷಮಿಸಿಬಿಡು ಮಗನೇ. ನಾನು ಪಡೆದುಕೊಂಡು ಬಂದದ್ದು ಅದು, ಏನು ಮಾಡೊದು? ಮನೆಯಲ್ಲಿ ಕಡು ಬಡತನ, ಕೆಲಸ ಕೊಡಿಸುತ್ತೇನೆ ಅಂತ ನನ್ನನ್ನು ಕರೆದುಕೊಂಡು ಬಂದವ ನನ್ನನ್ನು ಈ ಪಾಪಕೂಪಕ್ಕೆ ತೂರಿದ್ದ. ಅಲ್ಲಿಂದ ಹೊರಬರಲು ಆಗಲೇ ಇಲ್ಲ. ನಾನು ಅಲ್ಲಿಂದ ಹೊರಬಂದು ಬದುಕಲು ನೀನೇ ಕಾರಣ, ನಿನ್ನ ಬದುಕಿನಲ್ಲಿ ನನ್ನ ವೃತ್ತಿ ಕಪ್ಪು ಚುಕ್ಕೆಯಾಗಬಾರದು ಅನ್ನುವುದೇ ನನ್ನ ಉದ್ದೇಶವಾಗಿತ್ತು. ಆದರೆ ಅದೇ ಇಂದು ನಿನ್ನ ದುಃಖಕ್ಕೆ ಕಾರಣವಾಗಿದೆ. ನಾನು ನಿನ್ನಿಂದ ಇನ್ನೂ ಒಂದು ವಿಷಯವನ್ನು ಮುಚ್ಚಿಟ್ಟೆ, ಹೋಗುವ ಮೊದಲು ಅದನ್ನೂ ಹೇಳಿಬಿಡುತ್ತೇನೆ ಕೇಳು. ನೀನು ನನಗೆ ಹುಟ್ಟಿದವನಲ್ಲ... ಹೌದು ಮಗನೇ. ಒಂದು ದಿನ ಈ ಪಾಪಕೂಪದಿಂದ ಮುಕ್ತಿ ಪಡೆದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ರಸ್ತೆಯಲ್ಲಿ ಬರುತ್ತಿದ್ದಾಗ ನೀನು ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದೆ. ಆಗಲೇ ನಾನು ನಿರ್ಧರಿಸಿದ್ದು, ನಿನ್ನನ್ನು ಸಾಕಲಾದರೂ ನಾನು ಬದುಕಬೇಕು ಎಂದು. ನಿನ್ನನ್ನು ಅನಾಥವಾಗಿ ಬಿಡಲೋ ಅಥವಾ ಅನಾಥಾಶ್ರಮ ಸೇರಿಸಲು ನನಗೆ ಮನಸ್ಸು ಬರಲೇ ಇಲ್ಲ, ನಿನ್ನ ನಗುವಲ್ಲೇ ನನ್ನ ನೋವನ್ನೆಲ್ಲ ಮರೆತೆ. ನನಗೆ ಇನ್ನೆನೂ ಬೇಡವಾಗಿತ್ತು, ನೀನು ಯಾವಾಗಲೂ ಸದಾ ನಗುತ್ತಿರಬೇಕು ಅನ್ನುವುದೇ ನನ್ನ ಆಸೆ. ಅದಕ್ಕೆ ನಾನು ನಿನ್ನಿಂದ ದೂರವಾಗುತ್ತಿದ್ದೇನೆ. ಈಗ ನೀನು ನಿನ್ನ ಕಾಲ ಮೇಲೆ ನಿಂತಿದ್ದೀಯಾ. ಇನ್ನಾದರೂ ಆರಾಮವಾಗಿರು. ಹೋಗುವ ಮೊದಲು ಇನ್ನೊಂದು ವಿಷಯವನ್ನು ಹೇಳುತ್ತೇನೆ ಕೇಳು. ನಾನು ವ್ಯಭಿಚಾರಿ ಅನ್ನುವುದು ಸತ್ಯ ಆದರೆ ಅದು ಹೆಣ್ಣಿನ ತಂದೆಗೆ ಹೇಗೆ ತಿಳಿಯಿತು. ಎಂದಾದರೂ ಆತ ಅಲ್ಲಿಗೆ ಬಂದಿರುವುದಕ್ಕೆ ತಾನೆ. ಹೆಣ್ಣು ಹಲವರ ಜೋತೆ ದೇಹ ಹಂಚಿಕೊಳ್ಳುವುದು ತಪ್ಪು ಆದರೆ ಗಂಡು ಈ ಕೆಲಸ ಮಾಡಿದರೆ ತಪ್ಪಿಲ್ಲ ಅಲ್ಲವಾ? ಯಾರೋ ಹೇಳಿದ ಮಾತಿಗೆ ನೀನು ನನ್ನನ್ನು ದೂಷಿಸಿದ್ದು ನಿಜಕ್ಕೊ ನನಗೆ ಬೇಸರವಾಯಿತು ಮಗನೇ. ಇರಲಿ ಬಿಡು, ಇನ್ನು ನಾನು ನಿನ್ನ ಜೋತೆಗಿಲ್ಲ.ನಿನಗಾರ ಕಾಟವೂ ಇಲ್ಲ, ನೂರು ಕಾಲ ಸುಖವಾಗಿ ಬಾಳು ಮಗನೇ, ಇದಕ್ಕಾಗೇ ನಾನು ಇಷ್ಟು ವರ್ಷ ಬದುಕಿದ್ದು. ಈ ಅಮ್ಮನ ಆಶೀರ್ವಾದ ಸದಾ ನಿನ್ನ ಮೇಲಿದೆ. ಬರುತ್ತೇನೆ,

ಆತ ನಡುಗುತ್ತ ಅಲ್ಲೇ ಕುಸಿದ. ಇವನಿಗೆ ತಿಳಿದಯದೇ ಇದ್ದ ಅದೆಷ್ಟೋ ಗುಟ್ಟನ್ನು ಬಿಚ್ಚಿಟ್ಟಿದ್ದಳು ಆಕೆ. ಆದರೆ ಮಾತು ಆಡಾಗಿತ್ತು ಮುತ್ತು ಒಡೆದು ಹೋಗಿತ್ತು, ಕ್ಷಮೆ ಕೋರಲು ಆಕೆ ಅಲ್ಲಿರಲಿಲ್ಲ. ಈಗ ಅವನ ಹತ್ತಿರ ಇದ್ದದ್ದು ಅಮ್ಮನ ನೆನಪು ಮತ್ತು ಆಕೆಯ ಪತ್ರ ಮಾತ್ರ.

No comments:

Post a Comment